ಬೆಂಗಳೂರು, ಫೆ.10:ಒಟ್ಟು 24 ಕೊಲೆ ಪ್ರಕರಣಗಳಲ್ಲಿ ಬೇಕಾಗಿದ್ದ ಬಿಹಾರ ಮೂಲದ ಅಪ್ಪ–ಮಗ ಜೋಡಿಯನ್ನು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 40ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ ಮಣಿಕ್ ಸಿಂಗ್ ಹಾಗೂ ಆತನ ತಂದೆ ಮನೋಜ್ ಸಿಂಗ್ ಕಳೆದೊಂದು ವರ್ಷದಿಂದ ಬೆಂಗಳೂರುನಲ್ಲಿ ತಲೆಮರೆಸಿಕೊಂಡು ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧನ ಕಾರ್ಯಾಚರಣೆಯನ್ನು ಬಿಹಾರ ಸ್ಪೆಷಲ್ ಟಾಸ್ಕ್ ಫೋರ್ಸ್ ನಡೆಸಿದ್ದು, ರಾಜ್ಯ ಗುಪ್ತಚರ ಪೊಲೀಸರ ಸಹಕಾರವೂ ಲಭ್ಯವಿತ್ತು. ಬಂಧಿತರಿಂದ 8 ಡಾಂಗಲ್, 9 ಸ್ಮಾರ್ಟ್ ಮೊಬೈಲ್ಗಳು, 3 ಕೀಪ್ಯಾಡ್ ಫೋನ್ಗಳು ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿತ ಅಪ್ಪ–ಮಗರು ಒಟ್ಟು 24 ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇವರ ವಿರುದ್ಧ ಕೊಲೆ, ದರೋಡೆ, ಡಕಾಯಿತಿ, ಬೆದರಿಕೆ, ಹಫ್ತಾ ವಸೂಲಿ ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಸೇರಿ 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಎರಡು ಡಜನ್ಗೂ ಅಧಿಕ ಡಬಲ್ ಮರ್ಡರ್ ಪ್ರಕರಣಗಳಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಪಾಟ್ನಾ ನಿವಾಸಿಗಳಾದ ಇವರ ವಿರುದ್ಧ ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲೂ ಪ್ರಕರಣಗಳಿವೆ.
ರೂ.4 ಲಕ್ಷ ಬಹುಮಾನ ಘೋಷಣೆ:
ಆರೋಪಿಗಳ ಪತ್ತೆಗೆ ಬಿಹಾರ ಪೊಲೀಸರು ಒಟ್ಟಾರೆ ರೂ.4 ಲಕ್ಷ ಬಹುಮಾನ ಘೋಷಿಸಿದ್ದರು. ಮಣಿಕ್ ಸಿಂಗ್ ತಲೆಗೆ ರೂ.3 ಲಕ್ಷ ಹಾಗೂ ಮನೋಜ್ ಸಿಂಗ್ ತಲೆಗೆ ರೂ.1 ಲಕ್ಷ ಬಹುಮಾನ ನಿಗದಿಯಾಗಿತ್ತು. ಕಳೆದ ವರ್ಷ ಪಾಟ್ನಾದಲ್ಲಿ ಮನೀಶ್ ಕುಮಾರ್ ಎಂಬಾತನ ಹತ್ಯೆಯಲ್ಲಿ ಇವರಿಬ್ಬರೂ ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಇವರಿಗಾಗಿ ಶೋಧ ಕಾರ್ಯಾಚರಣೆ ತೀವ್ರಗೊಂಡಿತ್ತು.
2015ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ, ಆರೋಪಿಗಳು ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳಕ್ಕೆ ಪರಾರಿಯಾಗಿ ಅಲ್ಲಿಯೂ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದರು ಎನ್ನಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತರುವಾಗ ಛೋಟೆ ಸರ್ಕಾರ್ ಎಂಬ ಕೈದಿಯನ್ನು ಹತ್ಯೆ ಮಾಡಿರುವ ಆರೋಪವೂ ಇವರ ಮೇಲಿದೆ. ಛೋಟೆ ಸರ್ಕಾರ್ ವಿರುದ್ಧ 16 ಪ್ರಕರಣಗಳು ದಾಖಲಾಗಿದ್ದವು.
ಬಂಧನಕ್ಕೂ ಮುನ್ನ, ಪೊಲೀಸರು ಎನ್ಕೌಂಟರ್ ಮಾಡಬಹುದು ಎಂಬ ಆತಂಕ ವ್ಯಕ್ತಪಡಿಸಿ ಮಣಿಕ್ ಹಾಗೂ ಮನೋಜ್ ವೀಡಿಯೋ ಸಂದೇಶ ಬಿಡುಗಡೆ ಮಾಡಿದ್ದರು. ತಮ್ಮನ್ನು ಬಂಧಿಸಿ ಕೈಕೋಳ ಹಾಕಿಯೇ ಕರೆದೊಯ್ಯುವಂತೆ ವೀಡಿಯೋದಲ್ಲಿ ಒತ್ತಾಯಿಸಿದ್ದರು. ಇದೀಗ ಇವರಿಗೆ ಬೆಂಗಳೂರಿನಲ್ಲಿ ಆಶ್ರಯ ನೀಡಿದವರ ಪತ್ತೆಗೆ ಬಿಹಾರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.