ಪೆರುವಾಜೆ ಶ್ರೀ ಜಲದುರ್ಗಾದೇವಿ ಸನ್ನಿಧಿಯಲ್ಲಿ ಎಪ್ರಿಲ್ 10, 11ರಂದು ಪ್ರತಿಷ್ಠಾ ವರ್ಧಂತಿ ಸಂಭ್ರಮ; ಭಕ್ತಾದಿಗಳ ಪೂರ್ವಭಾವಿ ಸಭೆ ಸಂಪನ್ನ
ಮನೆ ಮನೆಗೆ ಆಮಂತ್ರಣ ಪತ್ರಿಕೆ ಹಾಗೂ ಪೂಜಾ ರಶೀದಿ ವಿತರಣೆಗೆ ಭಕ್ತರ ತಂಡಗಳ ರಚನೆ.
ಪೆರುವಾಜೆ: ಸುಳ್ಯ, ಪುತ್ತೂರು ಮತ್ತು ಕಡಬ ತಾಲೂಕಿನ ಇಪ್ಪತ್ತೆರಡು ಗ್ರಾಮಗಳ ಮಾಗಣೆ ಕ್ಷೇತ್ರವಾಗಿರುವ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಎಪ್ರಿಲ್ 10 ಮತ್ತು 11 ರಂದು ನಡೆಯಲಿರುವ ಪ್ರತಿಷ್ಠಾ ವರ್ಧಂತಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಕುರಿತು ಭಕ್ತಾದಿಗಳ ಪೂರ್ವಭಾವಿ ಸಭೆಯು ಮಾ.29ರಂದು ಕ್ಷೇತ್ರದ ವಠಾರದಲ್ಲಿ ಯಶಸ್ವಿಯಾಗಿ ನಡೆಯಿತು.
ಧಾರ್ಮಿಕ ಕಾರ್ಯಕ್ರಮಗಳ ವಿವರ:
ಕ್ಷೇತ್ರದಲ್ಲಿ ಎ.10 ಮತ್ತು 11 ರಂದು ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಅಂಗವಾಗಿ ಚಂಡಿಕಾ ಹೋಮ, 108 ನಾಳಿಕೇರ ಗಣಪತಿ ಹವನ, ಮೂಡಪ್ಪ ಸೇವೆ ಹಾಗೂ ಶ್ರೀ ಸತ್ಯನಾರಾಯಣ ಪೂಜೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಮತ್ತು ಧಾರ್ಮಿಕ ವಿಧಿವಿಧಾನಗಳು ಅತ್ಯಂತ ವಿಜೃಂಭಣೆಯಿಂದ ನಡೆಯಲಿವೆ.
ಮನೆ ಮನೆಗೆ ಆಮಂತ್ರಣ – ಪೂಜಾ ರಶೀದಿ ವಿತರಣೆ:
ಸಭೆಯ ಅಧ್ಯಕ್ಷತೆ ವಹಿಸಿದ್ದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನಿಲ್ ಕುಮಾರ್ ರೈ ಪೆರುವಾಜೆಗುತ್ತು ಮಾತನಾಡಿ, “ಮಾಗಣೆ ವ್ಯಾಪ್ತಿಯ ಪ್ರತಿಯೊಂದು ಮನೆಗೂ ಆಮಂತ್ರಣ ಪತ್ರಿಕೆ ತಲುಪಿಸುವ ಗುರಿ ಹೊಂದಲಾಗಿದೆ. ಕ್ಷೇತ್ರದ ಕಾರ್ಯಕ್ರಮಗಳಲ್ಲಿ ಪ್ರತಿ ಮನೆಯವರೂ ಭಾಗಿಯಾಗುವಂತೆ ಪ್ರೇರೇಪಿಸಲು ಭಕ್ತವೃಂದದ ಸಹಕಾರ ಅಗತ್ಯ” ಎಂದರು. ಇದೇ ವೇಳೆ, ಕಾರ್ಯಕ್ರಮದ ಯಶಸ್ಸಿಗಾಗಿ ಪ್ರತಿ ಮನೆಯಿಂದ 350 ರೂ. ಮೊತ್ತದ ಪೂಜಾ ರಶೀದಿಯನ್ನು ಮಾಡಿಸುವ ಮೂಲಕ ಸಹಕರಿಸಲು ನಿರ್ಧರಿಸಲಾಯಿತು.
ಅಭಿವೃದ್ಧಿ ಯೋಜನೆಗಳು:
ದೇವಸ್ಥಾನದ ಆದಾಯ ವೃದ್ಧಿಸುವ ನಿಟ್ಟಿನಲ್ಲಿ ಮತ್ತು ಭಕ್ತಾದಿಗಳ ಅನುಕೂಲಕ್ಕಾಗಿ ಕ್ಷೇತ್ರದಲ್ಲಿ ನೂತನವಾಗಿ ಕಲ್ಯಾಣ ಮಂಟಪ ನಿರ್ಮಾಣ ಮಾಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಸುನಿಲ್ ಕುಮಾರ್ ರೈ ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.
ತಂಡಗಳ ರಚನೆ:
ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ಮಾತನಾಡಿ, ಆಮಂತ್ರಣ ಪತ್ರಿಕೆ ಮತ್ತು ರಶೀದಿ ಪುಸ್ತಕಗಳನ್ನು ವ್ಯವಸ್ಥಿತವಾಗಿ ವಿತರಿಸಲು ವಿವಿಧ ಭಾಗಗಳಿಗೆ ಪ್ರತ್ಯೇಕ ತಂಡಗಳನ್ನು ರಚಿಸುವಂತೆ ಸಲಹೆ ನೀಡಿದರು. ಈ ಮೂಲಕ ಕ್ಷೇತ್ರದ ಪ್ರತಿಯೊಬ್ಬ ಭಕ್ತನಿಗೂ ಮಾಹಿತಿ ತಲುಪಿಸಲು ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.