Home Uncategorizedಬದಲಾಗಲಿದೆಯೇ ಭಾರತದ ರಾಜಕೀಯ ನಕಾಶೆ? 2027ರ ಜನಗಣತಿ ಬೆನ್ನಲ್ಲೇ ಕ್ಷೇತ್ರ ಪುನರ್ವಿಂಗಡಣೆ  

ಬದಲಾಗಲಿದೆಯೇ ಭಾರತದ ರಾಜಕೀಯ ನಕಾಶೆ? 2027ರ ಜನಗಣತಿ ಬೆನ್ನಲ್ಲೇ ಕ್ಷೇತ್ರ ಪುನರ್ವಿಂಗಡಣೆ  

by anamika

“ಬದಲಾಗಲಿದೆಯೇ ಭಾರತದ ರಾಜಕೀಯ ನಕಾಶೆ? 2027ರ ಜನಗಣತಿ ಬೆನ್ನಲ್ಲೇ ಕ್ಷೇತ್ರ ಪುನರ್ವಿಂಗಡಣೆ

 

816 ಕ್ಕೆ ಏರಲಿದೆ ಲೋಕಸಭಾ ಸ್ಥಾನಗಳ ಸಂಖ್ಯೆ – ಸುಳ್ಯ ಮೀಸಲಾತಿ ರೊಟೇಷನ್ ಬಗ್ಗೆ ಬಿರುಸಿನ ಚರ್ಚೆ

ಕ್ಷೇತ್ರ ಪುನರ್ವಿಂಗಡಣೆ: ಹೆಚ್ಚಾಗಲಿವೆ ಎಂ.ಪಿ. ಹಾಗೂ ಎಂ.ಎಲ್.ಎ. ಸ್ಥಾನಗಳು; ಸುಳ್ಯದ ಮೀಸಲಾತಿ ಬದಲಾಗಲಿದೆಯೇ?

 

ಬೆಂಗಳೂರು/ಸುಳ್ಯ: ದೇಶದಲ್ಲಿ 16 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ 2027ರಲ್ಲಿ ನಡೆಯಲಿರುವ ಜನಗಣತಿಯು ಭಾರತದ ರಾಜಕೀಯ ಭೂಪಟವನ್ನೇ ಬದಲಿಸುವ ಮುನ್ಸೂಚನೆ ನೀಡಿದೆ. ಜನಸಂಖ್ಯೆಯ ಆಧಾರದ ಮೇಲೆ ನಡೆಯಲಿರುವ ಮುಂದಿನ ಕ್ಷೇತ್ರ ಪುನರ್ವಿಂಗಡಣೆಯಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳ ಸದಸ್ಯರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಲಿದೆ.

​ಸ್ಥಾನಗಳ ಹೆಚ್ಚಳದ ಲೆಕ್ಕಾಚಾರ:

ಪ್ರಸ್ತುತ ದೇಶದಲ್ಲಿರುವ 543 ಲೋಕಸಭಾ ಸ್ಥಾನಗಳ ಸಂಖ್ಯೆ 816 ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಕರ್ನಾಟಕ ರಾಜ್ಯದ ಮಟ್ಟಿಗೆ ನೋಡುವುದಾದರೆ, ಪ್ರಸ್ತುತ ಇರುವ 28 ಲೋಕಸಭಾ ಕ್ಷೇತ್ರಗಳ ಸಂಖ್ಯೆ 42 ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಇದು ರಾಜ್ಯದ ರಾಜಕೀಯ ಪ್ರಭಾವವನ್ನು ಕೇಂದ್ರದಲ್ಲಿ ಹೆಚ್ಚಿಸಲಿದೆ.

ಸುಳ್ಯ ಮೀಸಲಾತಿ ಕಗ್ಗಂಟು:

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರವು 1967 ರಿಂದಲೂ ಪರಿಶಿಷ್ಟ ಜಾತಿ (SC) ಮೀಸಲು ಕ್ಷೇತ್ರವಾಗಿದೆ. ಒಂದೇ ಕ್ಷೇತ್ರದಲ್ಲಿ ದಶಕಗಳಿಂದ ಮೀಸಲಾತಿ ಮುಂದುವರಿಯುತ್ತಿರುವುದಕ್ಕೆ ಈಗ ವಿರೋಧ ವ್ಯಕ್ತವಾಗುತ್ತಿದ್ದು, ‘ರೊಟೇಷನ್’ (ಸರದಿ) ಪದ್ಧತಿ ಜಾರಿಗೆ ಬರಬೇಕು ಎಂಬ ಬೇಡಿಕೆ ಬಲವಾಗುತ್ತಿದೆ. ರೊಟೇಷನ್ ಜಾರಿಯಾದರೆ ಸುಳ್ಯ ಸಾಮಾನ್ಯ ಕ್ಷೇತ್ರವಾಗಿ ಬದಲಾಗಿ, ಬೇರೆ ಕ್ಷೇತ್ರಗಳು ಮೀಸಲು ಪಟ್ಟಿಗೆ ಸೇರ್ಪಡೆಯಾಗಬಹುದು.

​ಮಹಿಳಾ ಮೀಸಲಾತಿ ಮತ್ತು ಸವಾಲುಗಳು:

ಮುಂದಿನ ಚುನಾವಣೆಯ ವೇಳೆಗೆ ಶೇ. 33ರಷ್ಟು ಮಹಿಳಾ ಮೀಸಲಾತಿ ಜಾರಿಗೆ ಬರುವ ಸಾಧ್ಯತೆ ದಟ್ಟವಾಗಿದೆ. ಪುನರ್ವಿಂಗಡಣೆಯಿಂದ ಹೆಚ್ಚಾಗುವ ಸುಮಾರು 273 ಕ್ಷೇತ್ರಗಳನ್ನು ಮಹಿಳೆಯರಿಗಾಗಿ ಮೀಸಲಿಡುವ ಚಿಂತನೆ ಸರ್ಕಾರದ ಮುಂದಿದೆ. ಇದರಿಂದಾಗಿ ಈಗಿರುವ ಪುರುಷ ಸಂಸದರು ಮತ್ತು ಶಾಸಕರಲ್ಲಿ ತಮ್ಮ ಕ್ಷೇತ್ರ ಕೈತಪ್ಪುವ ಆತಂಕ ಮನೆಮಾಡಿದೆ.

​ಜನಗಣತಿಯೇ ಆಧಾರ:

2026ರಲ್ಲಿ ಮನೆ ಗಣತಿ ಹಾಗೂ 2027ರಲ್ಲಿ ಪೂರ್ಣ ಪ್ರಮಾಣದ ಜನಗಣತಿ ನಡೆಯಲಿದೆ. ಈ ಗಣತಿಯ ಅಂಕಿ-ಅಂಶಗಳೇ ಕ್ಷೇತ್ರಗಳ ಹಂಚಿಕೆ ಮತ್ತು ಮೀಸಲಾತಿ ಬದಲಾವಣೆಗೆ ಅಂತಿಮ ಮಾನದಂಡವಾಗಲಿವೆ. ಉತ್ತರ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಅಲ್ಲಿ ಹೆಚ್ಚಿನ ಸ್ಥಾನಗಳು ಸೃಷ್ಟಿಯಾಗಿ, ದಕ್ಷಿಣ ಭಾರತದ ಮೇಲೆ ಪ್ರಾದೇಶಿಕ ಅಸಮತೋಲನ ಉಂಟಾಗುವ ಭೀತಿಯೂ ಚರ್ಚೆಗೆ ಗ್ರಾಸವಾಗಿದೆ.

You may also like

Leave a Comment