ತಿರುವನಂತಪುರ, ಫೆ.10: ಕೇರಳ ನ್ಯಾಯಾಂಗ ಇತಿಹಾಸದಲ್ಲಿ ಅಪರೂಪದ ಮೈಲಿಗಲ್ಲು ಸೃಷ್ಟಿಯಾಗಲಿದ್ದು, ದೃಷ್ಟಿ ವಿಕಲಚೇತನ ಮಹಿಳೆ ತಾನ್ಯಾ ನಾಥನ್ ರಾಜ್ಯದ ಮೊದಲ ಅಂಧ ಮಹಿಳಾ ನ್ಯಾಯಾಧೀಶೆಯಾಗುವತ್ತ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ಸಿವಿಲ್ ನ್ಯಾಯಾಧೀಶ (ಜೂನಿಯರ್ ವಿಭಾಗ) ಹುದ್ದೆಗೆ ನಡೆದ ಕೇರಳ ನ್ಯಾಯಾಂಗ ಸೇವೆಗಳ ಪರೀಕ್ಷೆಯಲ್ಲಿ, ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲಾದ ಮೆರಿಟ್ ಪಟ್ಟಿಯಲ್ಲಿ ತಾನ್ಯಾ ನಾಥನ್ ಅವರು ಪ್ರಥಮ ರ್ಯಾಂಕ್ ಗಳಿಸಿದ್ದಾರೆ ಎಂದು ಅಧಿಕೃತ ವಲಯಗಳಿಂದ ತಿಳಿದುಬಂದಿದೆ. ನೇಮಕಾತಿ ಪತ್ರಕ್ಕಾಗಿ ಅವರು ಕಾಯುತ್ತಿದ್ದಾರೆ.
ಪರೀಕ್ಷೆಗೆ ಯಾವುದೇ ಕೋಚಿಂಗ್ ಪಡೆಯದೆ, ಬೈಲ್ ಲಿಪಿ ಬಳಸಿ ಸ್ವತಃ ಸಿದ್ಧತೆ ನಡೆಸಿದ್ದಾಗಿ ತಾನ್ಯಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸಂದರ್ಶನಕ್ಕೆ ಪೂರ್ವಭಾವಿಯಾಗಿ ತಿರುವನಂತಪುರದ ವಕೀಲರೊಬ್ಬರಿಂದ ಮಾರ್ಗದರ್ಶನ ಪಡೆದಿರುವುದನ್ನೂ ಅವರು ವಿವರಿಸಿದ್ದಾರೆ.
ದೃಢ ಸಂಕಲ್ಪ, ಶ್ರಮ ಮತ್ತು ಆತ್ಮವಿಶ್ವಾಸದ ಮೂಲಕ ಸಾಧನೆ ಮಾಡಿದ ತಾನ್ಯಾ ನಾಥನ್ ಅವರ ಯಶಸ್ಸು, ನ್ಯಾಯಾಂಗ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಬರೆಯುವ ಜೊತೆಗೆ ಅನೇಕ ಯುವತಿಯರಿಗೆ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಪ್ರೇರಣೆಯಾಗಿ ಪರಿಣಮಿಸಿದೆ.