ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಹೊರಡಿಸಿದ್ದ ವಿವಾದಾತ್ಮಕ ‘ಇಕ್ವಿಟಿ ನಿಯಮಗಳು 2026’ಕ್ಕೆ ಸುಪ್ರೀಂ ಕೋರ್ಟ್ ಗುರುವಾರ (ಜನವರಿ 29) ಮಧ್ಯಂತರ ತಡೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ಈ ಆದೇಶ ಹೊರಡಿಸಿದ್ದು, ಹೊಸ ನಿಯಮಗಳು ಪ್ರಾಥಮಿಕವಾಗಿ ‘ಅಸ್ಪಷ್ಟ’ ಮತ್ತು ‘ದುರುಪಯೋಗವಾಗಬಹುದು’ ಎಂದು ಅಭಿಪ್ರಾಯಪಟ್ಟಿದೆ. ಅಂತಿಮ ತೀರ್ಪು ಬರುವವರೆಗೆ 2012ರ ಹಳೆಯ ನಿಯಮಗಳೇ ಜಾರಿಯಲ್ಲಿರುತ್ತವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಈ ನಿಯಮಗಳು ಕೇವಲ ಎಸ್ಸಿ, ಎಸ್ಟಿ ಮತ್ತು ಒಬಿಸಿ ವರ್ಗದವರಿಗೆ ಮಾತ್ರ ರಕ್ಷಣೆ ನೀಡಿ, ಸಾಮಾನ್ಯ ವರ್ಗದ ವಿದ್ಯಾರ್ಥಿಗಳನ್ನು ತಾರತಮ್ಯದ ವ್ಯಾಖ್ಯಾನದಿಂದ ಹೊರಗಿಟ್ಟಿರುವುದು ಅಸಂವಿಧಾನಿಕ ಎಂಬ ವಾದ ಕೇಳಿಬಂದಿತ್ತು. ಈ ಬೆನ್ನಲ್ಲೇ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿದ್ದು, ಕರ್ಣಿ ಸೇನೆ ಸೇರಿದಂತೆ ಹಲವು ಸಂಘಟನೆಗಳು ಫೆಬ್ರವರಿ 1 ರಂದು ‘ಭಾರತ್ ಬಂದ್’ಗೆ ಕರೆ ನೀಡಿವೆ. ಈ ಆಂತರಿಕ ಸಂಘರ್ಷ ಬಿಜೆಪಿಯಲ್ಲೂ ಸ್ಫೋಟಗೊಂಡಿದ್ದು, ಕೇಂದ್ರದ ಈ ನಡೆಯನ್ನು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ನಾಯಕರು ವಿರೋಧಿಸಿರುವುದು “ಬಿಜೆಪಿ ವರ್ಸಸ್ ಬಿಜೆಪಿ” ಸಮರಕ್ಕೆ ನಾಂದಿ ಹಾಡಿದೆ