Home ಬ್ರೇಕಿಂಗ್ ನ್ಯೂಸ್​”ನನ್ನನ್ನು ಮದುವೆಯಾಗು” ಎಂದು ಆಸ್ಪತ್ರೆಯಲ್ಲಿ ವಧುವಿನ ಕಣ್ಣೀರು: ಪ್ರಾಣಾಪಾಯದಿಂದ ಪಾರಾದ ವರನಿಂದ ಖಡಕ್ ನಿರಾಕರಣೆ

​”ನನ್ನನ್ನು ಮದುವೆಯಾಗು” ಎಂದು ಆಸ್ಪತ್ರೆಯಲ್ಲಿ ವಧುವಿನ ಕಣ್ಣೀರು: ಪ್ರಾಣಾಪಾಯದಿಂದ ಪಾರಾದ ವರನಿಂದ ಖಡಕ್ ನಿರಾಕರಣೆ

by Editor

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಸಿನಿಮಾ ಮಾದರಿಯ ಭೀಕರ ಘಟನೆಯೊಂದು ನಡೆದಿದ್ದು, ಮದುವೆ ಸಂಭ್ರಮದ ನಡುವೆಯೇ ರಕ್ತ ಹರಿದಿದೆ. ಮದುವೆಯಾಗಬೇಕಿದ್ದ ವರ ರವೀಶ್‌ಗೆ ವಧುವಿನ ಪ್ರಿಯಕರ ಎನ್ನಲಾದ ವ್ಯಕ್ತಿಯೊಬ್ಬ ಚಾಕು ಇರಿದಿದ್ದು, ಮದುವೆ ಮನೆಯು ಕ್ಷಣಾರ್ಧದಲ್ಲಿ ರಣರಂಗವಾಗಿ ಮಾರ್ಪಟ್ಟಿದೆ. ಪ್ರಾಣ ತೆಗೆಯುವ ಉದ್ದೇಶದಿಂದಲೇ ಈ ದಾಳಿ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ವರ ರವೀಶ್ ಪ್ರಸ್ತುತ ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಾಳಿಯ ಹಿಂದೆ ವಧು ನಯನಾಳ ಪ್ರಿಯಕರನ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಈ ಘಟನೆಯಿಂದಾಗಿ ನಡೆಯಬೇಕಿದ್ದ ಮದುವೆ ಅರ್ಧಕ್ಕೇ ಮುರಿದು ಬಿದ್ದಿದೆ. ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ, ಘಟನೆ ನಡೆದ ಬಳಿಕ ವಧು ನಯನಾ ಆಸ್ಪತ್ರೆಗೆ ಧಾವಿಸಿ, ಚಿಕಿತ್ಸೆ ಪಡೆಯುತ್ತಿರುವ ರವೀಶ್ ಬಳಿ ಬಂದು “ದಯವಿಟ್ಟು ನನ್ನನ್ನು ಮದುವೆಯಾಗು” ಎಂದು ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ. ಆದರೆ, ಪ್ರಾಣಾಪಾಯದಿಂದ ಪಾರಾಗಿರುವ ರವೀಶ್ ಮಾತ್ರ ಈ ಸಂಬಂಧವನ್ನು ಮುಂದುವರಿಸಲು ಖಡಾಖಂಡಿತವಾಗಿ ನಿರಾಕರಿಸಿದ್ದಾರೆ.

ತನ್ನ ನಿಲುವನ್ನು ಸ್ಪಷ್ಟಪಡಿಸಿರುವ ವರ ರವೀಶ್, “ಮದುವೆ ಮಂಟಪದಲ್ಲೇ ನನ್ನ ಪ್ರಾಣ ತೆಗೆಯಲು ಸಂಚು ನಡೆದಿದೆ. ಇಂತಹ ಆತಂಕದ ನಡುವೆ ಸಂಸಾರ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ನಾನು ಈಕೆಯನ್ನೇ ಮದುವೆಯಾದರೆ ಮುಂದೆ ನನ್ನ ಪ್ರಾಣಕ್ಕೆ ಏನಾದರೂ ಅಪಾಯವಾದರೆ ಅದಕ್ಕೆ ಯಾರು ಹೊಣೆ?” ಎಂದು ತನ್ನ ಅಳಲು ತೋಡಿಕೊಂಡಿದ್ದಾರೆ. ಸದ್ಯ ಈ ಪ್ರಕರಣವು ಕೊಳ್ಳೇಗಾಲದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಪೊಲೀಸರು ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ.

You may also like

Leave a Comment