Home ರಾಜ್ಯಪುತ್ತೂರು ‘ಲವ್-ಸೆಕ್ಸ್-ಧೋಖಾ’ ಪ್ರಕರಣಕ್ಕೆ ಬಿಗ್ ಟ್ವಿಸ್ಟ್:ಜನವರಿ 31ರ ಸಂಧಾನಕ್ಕೆ ಗಡುವು – ವಿವಾಹ ನಡೆಯದಿದ್ದರೆ ನಾಮಕರಣಕ್ಕೆ ಸಜ್ಜು

ಪುತ್ತೂರು ‘ಲವ್-ಸೆಕ್ಸ್-ಧೋಖಾ’ ಪ್ರಕರಣಕ್ಕೆ ಬಿಗ್ ಟ್ವಿಸ್ಟ್:ಜನವರಿ 31ರ ಸಂಧಾನಕ್ಕೆ ಗಡುವು – ವಿವಾಹ ನಡೆಯದಿದ್ದರೆ ನಾಮಕರಣಕ್ಕೆ ಸಜ್ಜು

by Editor

ಮಂಗಳೂರು: ಪುತ್ತೂರಿನಲ್ಲಿ ಸಂಚಲನ ಮೂಡಿಸಿರುವ ‘ಲವ್-ಸೆಕ್ಸ್-ಧೋಖಾ’ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಸಂಧಾನದ ಹಂತಕ್ಕೆ ಬಂದು ನಿಂತಿದ್ದು, ಜ. 31ರೊಳಗೆ ಮದುವೆ ನಡೆಯಲೇಬೇಕು ಎಂಬ ಕಟ್ಟುನಿಟ್ಟಿನ ಗಡುವನ್ನು ವಿಧಿಸಲಾಗಿದೆ. ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಅವರು ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ನಿಗದಿತ ಅವಧಿಯೊಳಗೆ ಆರೋಪಿ ಕೃಷ್ಣ ಜೆ. ರಾವ್ ಸಂತ್ರಸ್ತೆಯನ್ನು ವಿವಾಹವಾಗದಿದ್ದರೆ, ಫೆಬ್ರವರಿ 7ರಂದು ಮಗುವಿನ ನಾಮಕರಣ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿಸಿ ಕಾನೂನು ಸಮರವನ್ನು ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ತೊಟ್ಟಿಲು ಶಾಸ್ತ್ರ ಮುಂದೂಡಿಕೆ – ಮದುವೆಗೆ ಸಮ್ಮತಿಸಿದ ಆರೋಪಿ ಕುಟುಂಬ:

ಆರೋಪಿ ಕೃಷ್ಣ ಜೆ. ರಾವ್ ಕುಟುಂಬದವರು ಮದುವೆಗೆ ಒಪ್ಪಿಗೆ ಸೂಚಿಸಿದ ಕಾರಣ, ಜನವರಿ 24ಕ್ಕೆ ನಿಗದಿಯಾಗಿದ್ದ ಮಗುವಿನ ತೊಟ್ಟಿಲು ಶಾಸ್ತ್ರವನ್ನು ಸದ್ಯಕ್ಕೆ ಮುಂದೂಡಲಾಗಿದೆ. ಉಡುಪಿ ಒಕ್ಕೂಟದ ಪದಾಧಿಕಾರಿಗಳ ಮನವಿಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆಯಾದರೂ, ಸಂಧಾನದ ಹಾದಿ ಅಷ್ಟು ಸುಗಮವಾಗಿಲ್ಲ. ಈ ಹಿಂದೆಯೇ ಮಗುವನ್ನು ಆಶ್ರಮಕ್ಕೆ ನೀಡುವಂತೆ ಅಥವಾ ವಿಚ್ಛೇದನ ನೀಡುವಂತೆ ಬೇಡಿಕೆ ಇಟ್ಟಿದ್ದ ಕುಟುಂಬದ ಮೇಲೆ ಸಂತ್ರಸ್ತೆಯ ಕಡೆಯವರಿಗೆ ಅಪನಂಬಿಕೆ ಇದೆ. ಈ ಬಾರಿಯೂ ಕುಟುಂಬವು ಸಂಧಾನದ ಹೆಸರಿನಲ್ಲಿ ದಾರಿ ತಪ್ಪಿಸುವ ನಾಟಕವಾಡುತ್ತಿದೆ ಎಂಬ ಶಂಕೆ ವ್ಯಕ್ತಪಡಿಸಿರುವ ಪ್ರತಿಭಾ ಕುಳಾಯಿ, ಸಂಧಾನವು ಪೊಲೀಸ್ ಠಾಣೆ ಅಥವಾ ಎಸ್‌ಪಿ ಕಚೇರಿಯಲ್ಲೇ ನಡೆಯಬೇಕು ಎಂದು ಷರತ್ತು ವಿಧಿಸಿದ್ದಾರೆ.

ನ್ಯಾಯಕ್ಕಾಗಿ ಕಾನೂನು ಹೋರಾಟದ ಪಟ್ಟು:

ಈ ಪ್ರಕರಣದಲ್ಲಿ ಯಾವುದೇ ರೂಪದಲ್ಲಾದರೂ ಮದುವೆ ಕಾನೂನುಬದ್ಧವಾಗಿ ನಡೆಯಲಿ ಮತ್ತು ತಪ್ಪಿತಸ್ಥರಿಗೆ ಪ್ರಾಯಶ್ಚಿತವಾಗಲಿ ಎಂಬುದು ಸಂತ್ರಸ್ತ ಕುಟುಂಬದ ಏಕೈಕ ಬೇಡಿಕೆಯಾಗಿದೆ. ಒಂದು ವೇಳೆ ಜ. 31ರ ಒಳಗಾಗಿ ವಿವಾಹ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಯಾವುದೇ ಮಾತುಕತೆಗೆ ಅಥವಾ ಸಂಧಾನಕ್ಕೆ ಅವಕಾಶವಿರುವುದಿಲ್ಲ ಎಂದು ಕಟ್ಟುನಿಟ್ಟಾಗಿ ತಿಳಿಸಲಾಗಿದೆ. ಸಮಾಜದಲ್ಲಿ ಸಂತ್ರಸ್ತೆಗೆ ಮತ್ತು ಮಗುವಿಗೆ ನ್ಯಾಯ ಸಿಗಬೇಕು ಎಂಬ ಉದ್ದೇಶದಿಂದ ಈ ಹೋರಾಟವನ್ನು ಹಮ್ಮಿಕೊಳ್ಳಲಾಗಿದ್ದು, ಆರೋಪಿ ಕುಟುಂಬದ ಮುಂದಿನ ನಡೆಯ ಮೇಲೆ ಎಲ್ಲರ ಕುತೂಹಲ ನೆಟ್ಟಿದೆ.

You may also like

Leave a Comment