ನೇಪಾಳದಲ್ಲಿ ನೆಲೆಸಿ ಭಾರತೀಯರನ್ನು ಗುರಿಯಾಗಿಸಿ ನೂರಾರು ಕೋಟಿ ರೂಪಾಯಿ ವಂಚಿಸುತ್ತಿದ್ದ ಬೃಹತ್ ಅಂತಾರಾಷ್ಟ್ರೀಯ ಆನ್ಲೈನ್ ಹೂಡಿಕೆ ವಂಚನೆ ಜಾಲವನ್ನು ಮಂಗಳೂರು ನಗರ ಸೆನ್ (CEN) ಪೊಲೀಸರು ಭೇದಿಸಿದ್ದು, 11 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ನೀಡುವುದಾಗಿ ನಂಬಿಸಿ ಬರೋಬ್ಬರಿ 1.38 ಕೋಟಿ ರೂಪಾಯಿ ವಂಚಿಸಿದ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಈ ಜಾಲದ ಸುಳಿವು ಸಿಕ್ಕಿದೆ. ಬಂಧಿತರೆಲ್ಲರೂ ಉತ್ತರ ಭಾರತದ ವಿವಿಧ ರಾಜ್ಯಗಳಿಗೆ ಸೇರಿದವರಾಗಿದ್ದು, ಈ ಜಾಲದ ಹಿಂದಿದ್ದ ಚೀನಾ ಮೂಲದ ಪ್ರಮುಖ ಆರೋಪಿಗಳನ್ನು ನೇಪಾಳ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ತನಿಖೆಯ ವೇಳೆ ಆರೋಪಿಗಳು ಬಳಸುತ್ತಿದ್ದ ಬರೋಬ್ಬರಿ 624 ಬ್ಯಾಂಕ್ ಖಾತೆಗಳು ಪತ್ತೆಯಾಗಿದ್ದು, ಕೇವಲ ಒಂದೇ ಒಂದು ಖಾತೆಯಲ್ಲಿ 167 ಕೋಟಿ ರೂ. ವ್ಯವಹಾರ ನಡೆದಿರುವುದು ವಂಚನೆಯ ಭೀಕರತೆಯನ್ನು ತೋರಿಸುತ್ತದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.
ಆರೋಪಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಅಮಾಯಕರನ್ನು ಸಂಪರ್ಕಿಸಿ, ಬ್ಯಾಂಕ್ ಖಾತೆ ಒದಗಿಸಿದರೆ ಶೇ. 5 ರಿಂದ 10 ರಷ್ಟು ಕಮಿಷನ್ ನೀಡುವುದಾಗಿ ಆಮಿಷ ಒಡ್ಡಿ ಅವರನ್ನು ನೇಪಾಳ, ದುಬೈಗೆ ಕರೆಸಿಕೊಳ್ಳುತ್ತಿದ್ದರು. ನಂತರ ಅವರಿಂದ ಬ್ಯಾಂಕ್ ಖಾತೆ ಮತ್ತು ಸಿಮ್ ಕಾರ್ಡ್ಗಳನ್ನು ಪಡೆದು, ಸಾರ್ವಜನಿಕರಿಂದ ಲೂಟಿ ಮಾಡಿದ ಹಣವನ್ನು ಈ ಖಾತೆಗಳಿಗೆ ವರ್ಗಾಯಿಸಿಕೊಂಡು, ತಕ್ಷಣವೇ ಅದನ್ನು ಕ್ರಿಪ್ಟೋ ಕರೆನ್ಸಿಯಾಗಿ (USDT) ಪರಿವರ್ತಿಸಿ ವಿದೇಶಗಳಿಗೆ ರವಾನಿಸುತ್ತಿದ್ದರು ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ. ಈ ಪ್ರಕರಣದಲ್ಲಿ ‘ಡಿಜಿಟಲ್ ಸ್ಲೇವರಿ’ ಎಂಬ ಆಘಾತಕಾರಿ ಅಂಶವೂ ಬೆಳಕಿಗೆ ಬಂದಿದ್ದು, ವಿದೇಶದಲ್ಲಿ ಉದ್ಯೋಗದ ಭರವಸೆ ನೀಡಿ ಕರೆದೊಯ್ದು, ಪಾಸ್ಪೋರ್ಟ್ ಕಸಿದುಕೊಂಡು ಭಾರತೀಯ ಯುವಕರನ್ನೇ ಈ ವಂಚನೆ ಕೃತ್ಯಕ್ಕೆ ಬಲವಂತವಾಗಿ ಬಳಸಿಕೊಳ್ಳಲಾಗುತ್ತಿತ್ತು ಎಂಬುದು ಬಹಿರಂಗವಾಗಿದೆ.
ವಂಚಕರು ಸೆಬಿ (SEBI) ನೋಂದಾಯಿತ ಸಂಸ್ಥೆಯೆಂದು ನಕಲಿ ಪ್ರಮಾಣಪತ್ರಗಳನ್ನು ತೋರಿಸಿ, ನಕಲಿ ಟ್ರೇಡಿಂಗ್ ಆಪ್ಗಳ ಮೂಲಕ ಹೂಡಿಕೆದಾರರಿಗೆ ಆರಂಭದಲ್ಲಿ ಲಾಭ ಬಂದಂತೆ ತೋರಿಸಿ ನಂಬಿಸುತ್ತಿದ್ದರು. ನಂತರ ಹೆಚ್ಚಿನ ಹಣ ಹೂಡಿಕೆ ಮಾಡಿಸಿ, ಹಣ ಹಿಂಪಡೆಯಲು ಸಾಧ್ಯವಾಗದಂತೆ ಮಾಡಿ ಮೋಸ ಮಾಡುತ್ತಿದ್ದರು. ಆರೋಪಿಗಳು ಬಳಸಿದ ಬ್ಯಾಂಕ್ ಖಾತೆಗಳ ವಿರುದ್ಧ ದೇಶಾದ್ಯಂತ ಇರುವ ‘ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್’ (NCRP) ನಲ್ಲಿ ಈಗಾಗಲೇ 4580ಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದು, ಇದೊಂದು ದೇಶವ್ಯಾಪಿ ಹಬ್ಬಿದ ವಂಚನೆ ಜಾಲವಾಗಿದೆ. ಸದ್ಯ ಬಂಧಿತರಿಂದ 21 ಮೊಬೈಲ್ ಫೋನ್ಗಳು, ಲ್ಯಾಪ್ಟಾಪ್ ಹಾಗೂ ವಿವಿಧ ಬ್ಯಾಂಕ್ ಕಾರ್ಡ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಾರ್ವಜನಿಕರು ಕಮಿಷನ್ ಆಸೆಗೆ ಬಿದ್ದು ತಮ್ಮ ಬ್ಯಾಂಕ್ ಖಾತೆಗಳನ್ನು ಅಪರಿಚಿತರಿಗೆ ನೀಡಬಾರದು, ಒಂದು ವೇಳೆ ಅಂತಹ ಖಾತೆಗಳು ವಂಚನೆಗೆ ಬಳಕೆಯಾದರೆ ಖಾತೆದಾರರೂ ಸಹ ಸಹ-ಆರೋಪಿಗಳಾಗುತ್ತಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಯಾವುದೇ ಆನ್ಲೈನ್ ಹೂಡಿಕೆಗೂ ಮುನ್ನ ಎಚ್ಚರ ವಹಿಸಬೇಕು ಮತ್ತು ಸೈಬರ್ ವಂಚನೆ ನಡೆದ ತಕ್ಷಣವೇ ‘1930’ ಸಹಾಯವಾಣಿಗೆ ಕರೆ ಮಾಡಿದರೆ ಕಳೆದುಕೊಂಡ ಹಣವನ್ನು ತಡೆಹಿಡಿಯಲು ಸಾಧ್ಯವಾಗುತ್ತದೆ ಎಂದು ಪೊಲೀಸರು ತಿಳಿಸಿದ್ದು, ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ
, ಪತ್ತೆ ಕಾರ್ಯ ಮುಂದುವರೆದಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಪ್ರಮುಖ ಅಂಶಗಳು:
ವ್ಯಾಪಕ ಜಾಲ: ವಂಚಕರು ಬಳಸಿದ 10 ಖಾತೆಗಳಲ್ಲಿ ಸುಮಾರು 30 ಕೋಟಿ ರೂ. ಹಣ ವರ್ಗಾವಣೆಯಾಗಿದ್ದು, ಒಟ್ಟು 128 ಪ್ರಕರಣಗಳು ಹಾಗೂ 36 ಎಫ್ಐಆರ್ಗಳು ದೇಶಾದ್ಯಂತ ದಾಖಲಾಗಿವೆ.
11 ಆರೋಪಿಗಳು ಉತ್ತರ ಪ್ರದೇಶ, ಗುಜರಾತ್, ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ ಮತ್ತು ರಾಜಸ್ಥಾನ ಮೂಲದವರು.
ವಂಚನೆಯ ಹಣವನ್ನು ತಕ್ಷಣವೇ ‘ಯುಎಸ್ಡಿಟಿ’ (USDT) ಮೂಲಕ ವಿದೇಶಿ ಕರೆನ್ಸಿಗೆ ಬದಲಾಯಿಸಿ ವರ್ಗಾಯಿಸುತ್ತಿದ್ದರಿಂದ ಹಣ ಮರಳಿ ಪಡೆಯುವುದು ಕಷ್ಟಸಾಧ್ಯವಾಗಿದೆ.
ಕಮಿಷನ್ ಆಸೆಗೆ ಬಿದ್ದು ತಮ್ಮ ಬ್ಯಾಂಕ್ ಖಾತೆಗಳನ್ನು ವಂಚಕರಿಗೆ ಬಳಸಲು ನೀಡಿದವರನ್ನೂ ಸಹ ಈ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಪರಿಗಣಿಸಲಾಗುತ್ತದೆ.
ಸೆಬಿ (SEBI) ನೋಂದಾಯಿತ ಸಂಸ್ಥೆಯೆಂದು ನಕಲಿ ಸರ್ಟಿಫಿಕೇಟ್ ತೋರಿಸಿ, ನಕಲಿ ಟ್ರೇಡಿಂಗ್ ಆಪ್ ಮೂಲಕ ಲಾಭ ಬಂದಿರುವಂತೆ ತೋರಿಸಿ ಜನರನ್ನು ಮರುಳು ಮಾಡಲಾಗುತ್ತಿತ್ತು.
ಸಹಾಯವಾಣಿ 1930: ಯಾವುದೇ ಸೈಬರ್ ವಂಚನೆ ನಡೆದ ತಕ್ಷಣವೇ (ಒಂದು ಗಂಟೆಯ ಒಳಗೆ) ‘1930’ ಸಂಖ್ಯೆಗೆ ಕರೆ ಮಾಡಿದರೆ ಹಣ ತಡೆಹಿಡಿಯುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.