Home ಕ್ರೈಂಪ್ರೀತಿ ನಿರಾಕರಿಸಿದ ಶಿಕ್ಷಕಿಯ ತುಟಿ ಕಚ್ಚಿ ತುಂಡು ಮಾಡಿದ ವಿದ್ಯಾರ್ಥಿ

ಪ್ರೀತಿ ನಿರಾಕರಿಸಿದ ಶಿಕ್ಷಕಿಯ ತುಟಿ ಕಚ್ಚಿ ತುಂಡು ಮಾಡಿದ ವಿದ್ಯಾರ್ಥಿ

by Editor

ಶಾಲೆಯಲ್ಲಿ ತನ್ನನ್ನು ನಿರಂತರವಾಗಿ ಕಾಡುತ್ತಿದ್ದ ವಿದ್ಯಾರ್ಥಿಯ ಕಾಟದಿಂದ ತಪ್ಪಿಸಿಕೊಳ್ಳಲು ಶಿಕ್ಷಕಿಯೊಬ್ಬರು ಶಾಲೆಯನ್ನೇ ಬಿಟ್ಟು, ಬೇರೆ ಶಾಲೆಗೆ ಸೇರಿಕೊಂಡಿದ್ದರು. ಆದರೂ ಹಿಂಬಾಲಿಸಿ ಬಂದು ಕಿರುಕುಳ ನೀಡುತ್ತಿದ್ದ. ಹೀಗೆ ಹಿಂಬಾಲಿಸಿ ಬಂದ ವಿದ್ಯಾರ್ಥಿ ಶಿಕ್ಷಕಿಯ ತುಟಿಗಳನ್ನು ಕಚ್ಚಿ ತುಂಡರಿಸಿದ ಘಟನೆ ನಡೆದಿದೆ.

ಹೌದು ತನ್ನನ್ನು ಪ್ರೀತಿಸಲು ನಿರಾಕರಿಸಿದ ಶಿಕ್ಷಕಿಯ ತುಟಿ ಕಚ್ಚಿದ ವಿದ್ಯಾರ್ಥಿಯ ವರ್ತನೆ,ಗುರು-ಶಿಷ್ಯರ ಪವಿತ್ರ ಸಂಬಂಧಕ್ಕೆ ಕಪ್ಪುಚುಕ್ಕೆ ಹಚ್ಚುವಂತಹ ಘಟನೆಯೊಂದು ನಡೆದಿದೆ. ತನ್ನನ್ನು ನಿರಂತರವಾಗಿ ಕಾಡುತ್ತಿದ್ದ ವಿದ್ಯಾರ್ಥಿಯ ಕಾಟ ತಾಳಲಾರದೆ ಶಿಕ್ಷಕಿ ಶಾಲೆಯನ್ನೇ ಬಿಟ್ಟಿದ್ದರೂ, ಆಕೆಯನ್ನ ಬೆನ್ನಟ್ಟಿದ ಕಾಮುಕ ವಿದ್ಯಾರ್ಥಿ ದಾರಿಯಲ್ಲಿ ತಡೆದು ಅಸಹ್ಯವಾಗಿ ಶಿಕ್ಷಕಿಯ ತುಟಿಗಳನ್ನು ಕಚ್ಚಿ ತುಂಡರಿಸಿ ವಿಕೃತಿ ಮೆರೆದಿದ್ದಾನೆ.

ಟ್ಯೂಷನ್‌ಗೆ ಹೋಗುವಾಗ ಹಿಂಬಾಲಿಸಿ ಶಿಕ್ಷಕಿಯ ತುಟಿ ಕಚ್ಚಿದ ಘಟನೆ ಉತ್ತರ ಪ್ರದೇಶದ ಮೈನ್‌ಪುರಿಯ ಸದರ್ ಕೊತ್ವಾಲಿ ವ್ಯಾಪ್ತಿಯಲ್ಲಿ ನಡೆದಿದೆ. ಸಂತ್ರಸ್ತ ಶಿಕ್ಷಕಿ ಎಂದಿನಂತೆ ಖಾಸಗಿ ಟ್ಯೂಷನ್ ನೀಡಲು ತೆರಳುತ್ತಿದ್ದಾಗ, ಅದೇ ಶಾಲೆಯ 12ನೇ ತರಗತಿಯ ವಿದ್ಯಾರ್ಥಿ ದಾರಿಯಲ್ಲಿ ಅಡ್ಡಗಟ್ಟಿದ್ದಾನೆ. ಮೊದಲು ವಾಗ್ವಾದಕ್ಕಿಳಿದ ವಿದ್ಯಾರ್ಥಿ, ನಂತರ ಏಕಾಏಕಿ ಶಿಕ್ಷಕಿಯ ಕುತ್ತಿಗೆಗೆ ಕೈಹಾಕಿ ಎಳೆದಾಡಿದ್ದಾನೆ. ಶಿಕ್ಷಕಿ ಪ್ರತಿರೋಧ ವ್ಯಕ್ತಪಡಿಸಿದಾಗ ರೊಚ್ಚಿಗೆದ್ದ ಆತ, ಆಕೆಯ ಮುಖಕ್ಕೆ ಮುಖವನ್ನು ಸೇರಿಸಿ ತುಟಿಗೆ ಮುತ್ತಿಡಲು ಮುಂದಾಗಿದ್ದಾನೆ. ಗಾಬರಿಗೊಂಡ ಶಿಕ್ಷಕಿ ಬಿಡಿಸಿಕೊಳ್ಳಲು ಪ್ರಯತ್ನಿಸಿದಾಗ ಹಲ್ಲುಗಳಿಂದ ಆಕೆಯ ಎರಡೂ ತುಟಿಗಳನ್ನು ಗಟ್ಟಿಯಾಗಿ ಕಚ್ಚಿ ತುಂಡರಿಸಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ:

ಸ್ಥಳೀಯ ವರದಿಗಳ ಪ್ರಕಾರ, ಈ ವಿದ್ಯಾರ್ಥಿ ಕಳೆದ ಹಲವು ದಿನಗಳಿಂದ ಶಿಕ್ಷಕಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ. ಶಾಲೆಯ ಆವರಣದಲ್ಲೂ ಚೇಷ್ಟೆ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಶಿಕ್ಷಕಿಯ ಕುಟುಂಬದವರು ವಿದ್ಯಾರ್ಥಿಯ ಪೋಷಕರಿಗೆ ದೂರು ನೀಡಿದ್ದರು. ಕೆಲ ದಿನ ಸುಮ್ಮನಿದ್ದ ವಿದ್ಯಾರ್ಥಿ ಮತ್ತೆ ತನ್ನ ವಿಕೃತಿಯನ್ನು ಮುಂದುವರಿಸಿದ್ದ. ಈ ಕಿರುಕುಳಕ್ಕೆ ಬೇಸತ್ತು ಶಿಕ್ಷಕಿ ಕೆಲಸವನ್ನೇ ಬಿಟ್ಟು ಬೇರೆ ಶಾಲೆಗೆ ಸೇರಿಕೊಂಡಿದ್ದರು. ಆದರೆ, ಅಲ್ಲಿಯೂ ಬೆನ್ನಟ್ಟಿದ ವಿದ್ಯಾರ್ಥಿ ಈ ಭೀಕರ ಕೃತ್ಯ ಎಸಗಿದ್ದಾನೆ. ಈ ಅಮಾನವೀಯ ಘಟನೆಯ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ವಿದ್ಯಾರ್ಥಿಯು ಶಿಕ್ಷಕಿಯನ್ನು ಬಲವಂತವಾಗಿ ಎಳೆದುಕೊಂಡು ಹೋಗುತ್ತಿರುವುದು ಮತ್ತು ದಾಳಿ ಮಾಡುತ್ತಿರುವ ದೃಶ್ಯ ಸಿಸಿಟಿವಿ ದೃಶ್ಯದಲ್ಲಿ ದಾಖಲಾಗಿದೆ. ತೀವ್ರವಾಗಿ ಗಾಯಗೊಂಡ ಶಿಕ್ಷಕಿಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದು , ಹೆಚ್ಚಿನ ಚಿಕಿತ್ಸೆಗಾಗಿ ಆಗ್ರಾಕ್ಕೆ ರವಾನಿಸಲಾಗಿದೆ. ಪ್ರಸ್ತುತ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಸಂತ್ರಸ್ತೆಯ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಮೈನ್‌ಪುರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

You may also like

Leave a Comment