ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ: ಒತ್ತೆಕೋಲ ಉತ್ಸವದ ಆಮಂತ್ರಣ ಅನಾವರಣ, ಕೊಳ್ಳಿಮುಹೂರ್ತ
ಸಂಪಾಜೆ: ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ ಗ್ರಾಮದ ಇತಿಹಾಸ ಪ್ರಸಿದ್ಧ ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಒತ್ತೆಕೋಲ ಉತ್ಸವವು ಮಾರ್ಚ್ 28ರಿಂದ 30ರವರೆಗೆ ವಿಜೃಂಭಣೆಯಿಂದ ನಡೆಯಲಿದ್ದು, ಇದರ ಅಂಗವಾಗಿ ಮಾರ್ಚ್ 14ರಂದು ಆಮಂತ್ರಣ ಬಿಡುಗಡೆ ಹಾಗೂ ಕೊಳ್ಳಿಮುಹೂರ್ತ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.
ಈ ಸಂದರ್ಭದಲ್ಲಿ ದೈವಸ್ಥಾನದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೈವಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಕೆ.ಬಿ. ಕೇಶವ ಆಚಾರ್ಯ ಕೀಲಾರು ಬೈಲು ಮುಹೂರ್ತದ ಕೊಳ್ಳಿಯನ್ನು ಕಡಿದು, ವಾದ್ಯಘೋಷದೊಂದಿಗೆ ಒತ್ತೆಕೋಲ ಗದ್ದೆಗೆ ಸಾಗಿಸಲಾಯಿತು. ಗದ್ದೆಯಲ್ಲಿರುವ ವಿಷ್ಣುಮೂರ್ತಿ ಕಟ್ಟೆಗೆ ವಿಶೇಷ ಪೂಜೆ ಮತ್ತು ಪ್ರಾರ್ಥನೆಗಳನ್ನು ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಒತ್ತೆಕೋಲ ಉತ್ಸವ ಸಮಿತಿಯ ಗೌರವಾಧ್ಯಕ್ಷ ರಾಜಾರಾಮ ಕೀಲಾರು, ಅಧ್ಯಕ್ಷ ಕೆ.ಆರ್. ಜಗದೀಶ್ ರೈ, ಮೊಕ್ತೇಸರ ಕೆ. ಕರುಣಾಕರ, ಕಾರ್ಯದರ್ಶಿ ಕೆ.ವಿ. ಮಂಜುನಾಥ್, ಕೋಶಾಧಿಕಾರಿ ಬಿ.ಆರ್. ಪದ್ಮಯ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದೇ ವೇಳೆ ಗೌರವ ಸಲಹೆಗಾರರಾದ ಶ್ರೀಧರ ಮಾದೇಪಾಲು, ಸತೀಶ್ ದೋಳ, ಅರ್ಚಕರಾದ ನರಸಿಂಹ ಭಟ್, ಪ್ರಧಾನ ಪೂಜಾರಿ ನಾರಾಯಣ ಬಿ. ಮಣಿಯಾಣಿ, ಉಪಪೂಜಾರಿಗಳು ಹಾಗೂ ಸಂಪಾಜೆ ವಲಯ ತೀಯ ಸಮಾಜದ ಅಧ್ಯಕ್ಷ ಶ್ರೀಧರ ಕಡೆಪಾಲ ಸೇರಿದಂತೆ ದೈವಸ್ಥಾನದ ಪದಾಧಿಕಾರಿಗಳು, ಸದಸ್ಯರು ಮತ್ತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.