ಬಾಳೆ ದಿಂಡಿನ ಹಗ್ಗದಲ್ಲಿ ಕಟ್ಟಿದ ಮಲ್ಲಿಗೆ ಹೂವನ್ನು ಮಾತ್ರ ಯಾಕೆ ದೇವರಿಗೆ ಸಮರ್ಪಣೆ ಮಾಡ್ತಾರೆ? ಇದರ ಹಿಂದಿನ ಕಥೆ, ಮಹತ್ವ ಏನು ಗೊತ್ತಿದೆಯೇ? ಸಂಪೂರ್ಣವಾಗಿ ಓದಿ!
ಧರ್ಮ ನಂಬಿಕೆ ಆಚರಣೆಗಳು ಎಂದರೆ ಅದರ ಆಳ ಮತ್ತು ಅಗಲ ತಿಳಿಯುವುದು ಬಹಳ ಕಷ್ಟ. ಅದೆಷ್ಟೋ ಆಚರಣೆ ಗಳನ್ನು ನಾವು ದೈನಂದಿನ ದಿನದಲ್ಲಿ ಕಾಣುತ್ತೇವೆ. ಆದರೆ ಅದು ಯಾಕೆ ಏನು ಎತ್ತ ಎಂಬ ಸಣ್ಣ ವಿಚಾರದಲ್ಲಿ ನಾವು ಯೋಚನೆ ಕೂಡ ಮಾಡುವುದಿಲ್ಲ.
ಇಂತಹ ಕೆಲವು ಆಚರಣೆಗಳ ಬಗ್ಗೆ ಅಧ್ಯಯನ ನಡೆಸುವಾಗ ನಮ್ಮ ಕಣ್ಣಿಗೆ ಬಿದ್ದಿದ್ದು ಒಂದು ಸಣ್ಣ ವಿಷಯ. ಅದರ ಬಗ್ಗೆ ಅಧ್ಯಯನ ನಡೆಸಿದಾಗ ತಿಳಿದಿದ್ದು ಬಹಳ ರೋಚಕ ಕಥೆ. ಪ್ರತಿ ನಿತ್ಯ ಮನುಷ್ಯ ದೇವರನ್ನು ನೆನೆಯದ ದಿನವಿಲ್ಲ. ಮನುಷ್ಯ ಮತ್ತು ದೇವರ ನಡುವೆ ಇರುವ ಸಂಬಂಧ ಅಂತಹದು. ನಾವೆಲ್ಲರೂ ದೇವರಿಗೆ ಪ್ರತಿದಿನ ಹೂವು ಇಡುತ್ತೇವೆ, ದೇವರಿಗೂ ಹೂವುಗಳು ಎಂದರೆ ಇಷ್ಟ, ಅದರಲ್ಲೂ ಮಲ್ಲಿಗೆ ಅಂದರೆ ಅತೀ ಪ್ರೀತಿ ಅಂತ ನಮ್ಮ ಹಿರಿಯರಿಂದ ನಾವು ತಿಳಿದುಕೊಂಡು ಬಂದಿದ್ದೇವೆ. ನಮ್ಮ ಹಿರಿಯರಾಗಲಿ ದೇವಸ್ಥಾನದಲ್ಲಿ ಅರ್ಚಕರಾಗಲಿ, ಅಥವಾ ನಾವೇ ಆಗಲಿ ದೇವಸ್ಥಾನದಲ್ಲಿ ಕೂಡ ಕಾಣಬಹುದು ಬೋರ್ಡ್ ಹಾಕಿರುವುದನ್ನು ಬಾಳೆ ಬಳ್ಳಿಯಲ್ಲಿ ಕಟ್ಟಿದ ಮಲ್ಲಿಗೆಯನ್ನು ದೇವರಿಗೆ ಅರ್ಪಿಸಲಾಗುವುದು ಅಂತ. ಹಾಗಾದ್ರೆ ಇದರ ಮಹತ್ವ ಏನು ತಿಳಿಯೋಣ.
ಬಾಳೆ ದಿಂಡಿನಲ್ಲಿ ಕಟ್ಟಿದ ಮಲ್ಲಿಗೆ ಯಾವಾಗ್ಲೂ ಶುದ್ಧ ಮತ್ತು ಪಾವಿತ್ರ್ಯತೆಯ ಸಂಕೇತ. ಹಾಗೆ ಇದು ಪ್ರಕೃತಿ ಜೊತೆಗೆ ಕೂಡ ನೆರಾನೇರವಾಗಿ ಸಂಪರ್ಕ ಹೊಂದಿದೆ. ಇತ್ತೀಚಿಗೆ ನೋಡಬಹುದು ನೂಲಿನಿಂದ ಕೂಡ ಕಟ್ಟುತ್ತಾರೆ ಆದರೆ ಬಾಳೆ ದಿಂಡಿನ ಹಗ್ಗ ಪ್ರಕೃತಿ ದತ್ತವಾದದ್ದು ಹಾಗಾಗಿ ಅದನ್ನ ಪರಿಶುದ್ಧತೆಯ ಸಂಕೇತ ಎಂದೂ ತಿಳಿಯಬಹುದು. ಬಾಳೆ ದಿಂಡು ಮತ್ತು ಮಲ್ಲಿಗೆ ಎರಡು ಕೂಡ ಸಾತ್ವಿಕ ಗುಣ ಹೊಂದಿದ್ದು ದೇವರ ಬಳಕೆಗೆ ಸಾತ್ವಿಕ ಗುಣ ಹೊಂದಿರುವ ವಸ್ತುಗಳೇ ಅತೀ ಹೆಚ್ಚು ಬಳಸುತ್ತಾರೆ.ಪಾರಂಪರಿಕವಾಗಿ ಕೂಡ ಇದನ್ನು ಬಳಸುತ್ತಾ ಬಂದಿರುವ ಕಾರಣ ಇದರ ಮಹತ್ವ ಕೂಡ ಇದೆ. ಹಾಗೆ ಇದು ಬೇಗನೆ ಬಾಡುವುದು ಕೂಡ ಇಲ್ಲ. ಹಾಗಿರುವಾಗ ಈ ಎಲ್ಲ ಮಹತ್ವದ ಕಾರಣ ದೇವರಿಗೆ ಇದನ್ನ ಪ್ರಧಾನವಾಗಿ ಪರಿಗಣಿಸುವುದು.
ಇದರ ಹಿಂದಿನ ಕಥೆ :
ಇದರ ಹಿಂದೆ ಭಕ್ತಿಯ ಮಹತ್ವ ಹೇಳುವ ಒಂದು ಸ್ಥಳೀಯ ಕಥೆ ಕೂಡ ಇದೆ.ಬಡವನೊಬ್ಬ ಯಾವಾಗಲೂ ದೇವಸ್ಥಾನಕ್ಕೆ ಹೋಗುತ್ತಿದ್ದ. ಅಲ್ಲಿ ಭಕ್ತರು ಬಂದು ತಮ್ಮ ಶಕ್ತಿ ಅನುಸಾರ ಚಿನ್ನ ಬೆಳ್ಳಿ ಒಪ್ಪಿಸುವದನ್ನು ನೋಡುತ್ತಿದ್ದ. ತನಗೆ ಏನು ಇಲ್ಲ ದೇವರಿಗೆ ತಾನು ಕೂಡ ಏನಾದರೂ ಕೊಡಬೇಕು ಎಂಬ ಚಿಂತನೆ ಅವನ ಮನಸಿನಲ್ಲಿ ಯಾವಾಗಲೂ ಇತ್ತು. ಏನು ಕೊಡುವುದು ಎಂದು ಯೋಚನೆ ಮಾಡುತ್ತಿರುವಾಗ ಮನೆಯ ಹಿತ್ತಲಲ್ಲಿ ಅರಳಿದ್ದ ಮಲ್ಲಿಗೆ ಹೂವನ್ನು ಕಂಡು ಎಲ್ಲವನ್ನು ಕೊಯ್ದನಂತೆ. ಹೇಗೆ ಕಟ್ಟುವುದು ಎಂದು ಯೋಚನೆ ಮಾಡುವಾಗ ಬಾಳೆ ದಿಂಡು ಕಂಡು ಅದರಿಂದ ತೆಳುವಾಗಿ ಹಗ್ಗದ ರೀತಿ ಮಾಡಿ ದೇವಸ್ಥಾನಕ್ಕೆ ಕೊಂಡೋಗಿ ದೇವರಿಗೆ ಅರ್ಪಣೆ ಮಾಡಿದನಂತೆ. ದೇವರು ಈತನ ಭಕ್ತಿ ಮತ್ತು ಸರಳತೆಗೆ ಮೆಚ್ಚಿದನಂತೆ ಎಂಬ ಕಥೆ ಕೂಡ ಇದೆ. ಹಿರಿಯರು ಕೂಡ ಹೇಳಿದ್ದುoಟು ಶುದ್ಧ ಮನಸಿನಿಂದ ಏನನ್ನು ಅರ್ಪಿಸಿದರು ದೇವರು ತೆಗೆದುಕೊಳ್ಳುತ್ತಾನೆ ಎಂದು ಇದಕ್ಕೆ ಬೇಕಾದಷ್ಟು ಕಥೆಗಳು ಕೂಡ ನಮ್ಮ ಪುರಾಣದಲ್ಲಿದೆ.
ಇದೆ ನೋಡಿ ನಾವು ಕೂಡ ದೇವರಿಗೆ ಪ್ರಿಯವಾದ ಮಲ್ಲಿಗೆ ಎಂದು ಕೊಂಡೋಯುತ್ತೇವೆ. ಅದು ಕೂಡ ಕೇಳಿ ಕೊಳ್ಳುತ್ತೇವೆ ಬಾಳೆ ದಿಂಡಿನ ಹಗ್ಗದ ಮಲ್ಲಿಗೆ ಕೊಡಿ ಅಂತ. ಆದರೆ ಅದನ್ನ ಯಾಕೆ ಅರ್ಪಣೆ ಮಾಡುತ್ತೇವೆ ಅದರ ಹಿನ್ನಲೆ ಏನು? ಮಹತ್ವ ಏನು? ಎಂಬುವುದರ ಬಗ್ಗೆ ನಮಗೂ ಜ್ಞಾನದ ಕೊರತೆ ಇತ್ತು. ಅದಲ್ಲದೆ ನಾವು ಅದರ ಬಗ್ಗೆ ಯೋಚನೆ ಕೂಡ ಮಾಡುವುದಿಲ್ಲ. ಹೀಗೆ ದಿನ ನಿತ್ಯದ ಸಣ್ಣ ಪುಟ್ಟ ಕೆಲಸಗಳಲ್ಲೂ ಕೂಡ ಇದೆ ರೀತಿ. ನಮ್ಮ ಸುತ್ತ ಮುತ್ತಲೇ ನಮಗೆ ಜ್ಞಾನರ್ಜನೆಗೆ ಬೇಕಾದ ಹಲವಾರು ವಿಷಯಗಳು ಸಿಕ್ಕಿದರು ನಾವು ಅದರ ಬಗ್ಗೆ ಗಮನ ಕೊಡುವುದಿಲ್ಲ.ಅಂತಹ ವಿಚಾರ ನಿಮ್ಮ ಮುಂದೆ ನಾವು ಪ್ರಸ್ತುತ ಪಡಿಸುತ್ತೇವೆ. ನಮ್ಮ ಈ ಒಂದು ಪ್ರಯತ್ನಕ್ಕೆ ನಿಮ್ಮ ಸಹಕಾರ ಸದಾ ಇರಲಿ.

ಬರವಣಿಗೆ : ಪ್ರೇಮ್ ತೋಕೂರು
ಬರವಣಿಗೆ : ಪ್ರೇಮ್ ತೋಕೂರು