65
ಗದಗ: ಐತಿಹಾಸಿಕ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಉತ್ಪನನ ಕಾರ್ಯವು ಇದೀಗ ರೋಚಕ ತಿರುವು ಪಡೆದುಕೊಂಡಿದೆ. ಉತ್ಖನನದ ವೇಳೆ ಹಾವುಗಳು ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ, ‘ನಿಧಿಯನ್ನು ಸರ್ಪಗಳು ಕಾಯುತ್ತಿವೆ’ ಎಂಬ ಭೀತಿ ಗ್ರಾಮಸ್ಥರಲ್ಲಿ ಮನೆ ಮಾಡಿತ್ತು. ಈ ಆತಂಕವನ್ನು ಹೋಗಲಾಡಿಸಲು ಮೈಸೂರಿನ ಖ್ಯಾತ ಉರಗ ರಕ್ಷಕ ಸ್ನೇಕ್ ಶಿವರಾಜು ನೇತೃತ್ವದ ತಂಡ ಲಕ್ಕುಂಡಿಗೆ ಆಗಮಿಸಿ ಜಾಗೃತಿ ಮೂಡಿಸಿದೆ.
ಮೂರನೇ ದಿನದ ಕಾರ್ಯಾಚರಣೆ ವೇಳೆ ಹಾವು ಕಂಡಿದ್ದರಿಂದ ಜೆಸಿಬಿ ಚಾಲಕ ಹಾಗೂ ಸ್ಥಳೀಯರು ಆತಂಕಕ್ಕೊಳಗಾಗಿದ್ದರು. ಆದರೆ ಸ್ಥಳ ಪರಿಶೀಲನೆ ನಡೆಸಿದ ಶಿವರಾಜು ತಂಡವು, “ಹಾವುಗಳು ನಿಧಿ ಕಾಯುತ್ತವೆ ಎಂಬುದು ಕೇವಲ ಭ್ರಮೆ. ಕೂದಲಿರುವ ಅಥವಾ ಹಲವು ತಲೆಗಳ ಹಾವುಗಳು ಕಾಲ್ಪನಿಕ” ಎಂದು ಸ್ಪಷ್ಟಪಡಿಸಿದರು. ಹಳೆಯ ನಂಬಿಕೆಗಳಿಗೆ ಕಿವಿಗೊಡದೆ, ವನ್ಯಜೀವಿಗಳನ್ನು ರಕ್ಷಿಸುವಂತೆ ಮನವಿ ಮಾಡಿದರು. ಈ ಮೂಲಕ ವೈಜ್ಞಾನಿಕ ಅರಿವು ಮೂಡಿಸಿ ಉತ್ಪನನ ಕಾರ್ಯಕ್ಕೆ ಎದುರಾಗಿದ್ದ ಭೀತಿಯನ್ನು ದೂರ ಮಾಡಿದರು.