ಮಂಗಳೂರು: ನಗರದ ಸುರತ್ಕಲ್ ವ್ಯಾಪ್ತಿಯಲ್ಲಿ ವಾಸವಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿರುವ ಘಟನೆ ವರದಿಯಾಗಿದ್ದು, ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಸರಗೋಡು ಜಿಲ್ಲೆಯ ಆರ್.ಡಿ. ನಗರ ಮೀಪುಗುರಿ ನಿವಾಸಿ ವೈಶಾಲಿ (23) ಎಂಬ ಯುವತಿ ಮಂಗಳೂರಿನ ಶ್ರೀನಿವಾಸ ಕಾಲೇಜಿನಲ್ಲಿ ಕ್ರಿಮಿನಾಲಜಿ ವ್ಯಾಸಂಗ ಮಾಡುತ್ತಿದ್ದರು. ಸುರತ್ಕಲ್ ಸಮೀಪದ ಕಾನಾದಲ್ಲಿರುವ ಪಿಜಿಯೊಂದರಲ್ಲಿ ವಾಸವಾಗಿದ್ದ ಆಕೆ, ಜನವರಿ 2026ರಿಂದ ‘ಫ್ಲೈ ಕ್ಯೂಬ್’ (Fly Qube) ಎಂಬ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು.
ಮದುವೆಯ ವಿಚಾರ ಬೆಳಕಿಗೆ
ಫೆಬ್ರವರಿ 7ರಂದು ವೈಶಾಲಿಯ ಸಂಬಂಧಿ ಹರಿದಾಸ್ ಅವರಿಗೆ ವಾಟ್ಸ್ಆ್ಯಪ್ ಮೂಲಕ ಸಂದೇಶವೊಂದು ಲಭ್ಯವಾಗಿದ್ದು, ಅದರಲ್ಲಿ ವೈಶಾಲಿಯು ಮೊಹಮ್ಮದ್ ಮಿದ್ಲಾಜ್ ಪಿ.ಎಚ್. ಎಂಬ ಯುವಕನೊಂದಿಗೆ ಜನವರಿ 31ರಂದು ಕೇರಳದ ವಯನಾಡ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿರುವ ಮಾಹಿತಿ ಇತ್ತು. ಈ ವಿಷಯವನ್ನು ಹರಿದಾಸ್ ಅವರು ವೈಶಾಲಿಯ ಪೋಷಕರಿಗೆ ತಿಳಿಸಿದ್ದಾರೆ.
ಸಂಪರ್ಕ ಕಡಿತ
ಮದುವೆಯ ವಿಚಾರ ತಿಳಿಯುತ್ತಿದ್ದಂತೆ ಪೋಷಕರು ಮಗಳಿಗೆ ಕರೆ ಮಾಡಿ ಮಾತನಾಡಿದ್ದಾರೆ. ಆದರೆ ನಂತರ ಮತ್ತೆ ಸಂಪರ್ಕಿಸಲು ಯತ್ನಿಸಿದಾಗ ವೈಶಾಲಿಯ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಫೆಬ್ರವರಿ 8ರಿಂದ ಆಕೆ ಯಾವುದೇ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಸಿಸಿಟಿವಿ ಪರಿಶೀಲನೆ
ಪೋಷಕರು ಪಿಜಿಗೆ ಭೇಟಿ ನೀಡಿ ಪರಿಶೀಲಿಸಿದಾಗ ವೈಶಾಲಿ ಅಲ್ಲಿ ಇರಲಿಲ್ಲ. ಪಿಜಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ವೇಳೆ, ಫೆಬ್ರವರಿ 9ರಂದು ವೈಶಾಲಿ ಪಿಜಿಯಿಂದ ಹೊರಟಿರುವುದು ದೃಢಪಟ್ಟಿದೆ.
ಪೊಲೀಸ್ ತನಿಖೆ
ತಮ್ಮ ಮಗಳು ಕಾಣೆಯಾಗಿರುವುದಾಗಿ ಹಾಗೂ ಆಕೆಯನ್ನು ಪತ್ತೆಹಚ್ಚಿ ಕೊಡಬೇಕೆಂದು ವೈಶಾಲಿಯ ಪೋಷಕರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿವಿಧ ಕೋನಗಳಿಂದ ತನಿಖೆ ಮುಂದುವರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ:⚡⭕ಕಾಡ್ಗಿಚ್ಚು ಭೀತಿ ಹಿನ್ನೆಲೆ: ಗಡಾಯಿಕಲ್ಲು ಚಾರಣಕ್ಕೆ ತಾತ್ಕಾಲಿಕ ನಿಷೇಧ!