ಸುಬ್ರಹ್ಮಣ್ಯ-ಮಂಗಳೂರು ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಕನ ಮೇಲೆ ಹಲ್ಲೆ; ಮೂವರು ಆರ್ಪಿಎಫ್ ವಶಕ್ಕೆ
ಸುಬ್ರಹ್ಮಣ್ಯ, ಜೂ. 2: ಸುಬ್ರಹ್ಮಣ್ಯದಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಪ್ಯಾಸೆಂಜರ್ ರೈಲಿನಲ್ಲಿ ಸಹಪ್ರಯಾಣಿಕನೊಬ್ಬರ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿ ಗಲಾಟೆ ಸೃಷ್ಟಿಸಿದ ಮೂವರು ಆರೋಪಿಗಳನ್ನು ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಸಿಬ್ಬಂದಿ ಬಂಟ್ವಾಳ ರೈಲು ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.
ಮಾಹಿತಿಯ ಪ್ರಕಾರ, ಕೋಡಿಂಬಾಳ ರೈಲು ನಿಲ್ದಾಣದಲ್ಲಿ ರೈಲು ಹತ್ತಿದ್ದ ಮೂವರು ವ್ಯಕ್ತಿಗಳು ಕೊನೆಯ ಬೋಗಿಯಲ್ಲಿ ಸಹಪ್ರಯಾಣಿಕನೊಂದಿಗೆ ವಾಗ್ವಾದ ನಡೆಸಿ ಬಳಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆ ಗಮನಿಸಿದ ಇತರ ಪ್ರಯಾಣಿಕರು ತಕ್ಷಣ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಆರ್ಪಿಎಫ್ ಸಿಬ್ಬಂದಿ, ರೈಲು ಬಂಟ್ವಾಳ ನಿಲ್ದಾಣ ತಲುಪುತ್ತಿದ್ದಂತೆ ಆರೋಪಿಗಳನ್ನು ವಶಕ್ಕೆ ಪಡೆದರು. ಘಟನೆಯ ಹಿನ್ನೆಲೆಯಲ್ಲಿ ರೈಲನ್ನು ಕೆಲ ನಿಮಿಷಗಳ ಕಾಲ ನಿಲ್ದಾಣದಲ್ಲೇ ತಡೆಹಿಡಿಯಲಾಗಿತ್ತು.
ಆರೋಪಿಗಳನ್ನು ಕೆಳಗಿಳಿಸಿದ ಬಳಿಕ ರೈಲು ಮಂಗಳೂರಿನತ್ತ ಪ್ರಯಾಣ ಮುಂದುವರಿಸಿತು. ಸದ್ಯ ಆರೋಪಿಗಳನ್ನು ಆರ್ಪಿಎಫ್ ವಶದಲ್ಲಿರಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮತ್ತು ಕಾನೂನು ಕ್ರಮ ಮುಂದುವರಿದಿದೆ.