ಜೇಸಿಐ ಪಂಜ ಪಂಚಶ್ರೀ ವತಿಯಿಂದ ಈಜು ತರಬೇತಿ ಸಮಾರೋಪ
ಈಜು ಜೀವನ ಕೌಶಲ್ಯ” — ಸಮಾರೋಪದಲ್ಲಿ ತಜ್ಞರ ಅಭಿಪ್ರಾಯ
ಪಂಜ: ಜೇಸಿಐ ಪಂಜ ಪಂಚಶ್ರೀ ಆಶ್ರಯದಲ್ಲಿ ಮತ್ತು ಭಾರತ್ ಸ್ಕೌಟ್ಸ್ ಹಾಗೂ ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಸಹಯೋಗದಲ್ಲಿ ಏನೆಕಲ್ಲು ಮರಕತ ರಸ್ತೆಯ ಸಮೀಪದ ಹೊಳೆಯಲ್ಲಿ ಆಯೋಜಿಸಲಾದ ಈಜು ತರಬೇತಿ ಶಿಬಿರದ ಸಮಾರೋಪ ಸಮಾರಂಭ ಎಪ್ರಿಲ್ 17ರಂದು ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಕೌಟ್ ಜಿಲ್ಲಾ ಸಹಾಯಕ ಆಯುಕ್ತರಾದ ದೇವಿಪ್ರಸಾದ್ ಜಾಕೆ ವಹಿಸಿದರು. ವಿಶೇಷ ಆಹ್ವಾನಿತರಾಗಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಠಾಣಾಧಿಕಾರಿ ಆಂಜನೇಯ ರೆಡ್ಡಿ ಭಾಗವಹಿಸಿ, “ಈಜು ಕಲೆ ಪ್ರತಿಯೊಬ್ಬರ ಜೀವನದಲ್ಲಿ ಅಗತ್ಯ ಕೌಶಲ್ಯವಾಗಬೇಕು” ಎಂದು ಅಭಿಪ್ರಾಯಪಟ್ಟರು.
ಅನುಗ್ರಹ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಜೇಸಿ ಗಣೇಶ್ ಪ್ರಸಾದ್ ನಾಯರ್ ಶುಭಾಶಯ ಕೋರಿದರು. 85 ಶಿಬಿರಾರ್ಥಿಗಳಿಗೆ ತರಬೇತಿ ನೀಡಿದ ರಾಷ್ಟ್ರಮಟ್ಟದ ತರಬೇತುದಾರ ಶ್ರೀಕಾಂತ್ ಅವರು ತಮ್ಮ ಅನುಭವ ಹಂಚಿಕೊಂಡು, ನೀರಿನಲ್ಲಿ ಈಜುವಾಗ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ವಿವರಿಸಿದರು.

ಜೇಸಿಐ ಪಂಜ ಪಂಚಶ್ರೀಯ ಅಧ್ಯಕ್ಷರಾದ ಜೇಸಿ ದೇವಿಪ್ರಸಾದ್ ಚಿಕ್ಮುಳಿ ಶಿಬಿರದ ಯಶಸ್ಸಿಗೆ ಕೈಜೋಡಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಶಿಬಿರಾರ್ಥಿಗಳಾದ ನೈನಿಕಾ, ದಿಶಾಂತ್ ಹಾಗೂ ಪೋಷಕರಾದ ದೇವಿಪ್ರಸಾದ್ ಮತ್ತು ದೀಪಿಕಾ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಶಿಬಿರದ ನಿರ್ದೇಶಕರಾದ ಜೇಸಿ ಅನಂತ ಕೃಷ್ಣ ಭಟ್ ಮೊಗ್ರ, ವಲಯ-15ರ ಅಧಿಕಾರಿ ಜೇಸಿ ಲೋಕೇಶ್ ಅಕ್ರಿಕಟ್ಟೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸ್ಕೌಟ್ ಗೈಡ್ ಪಂಜ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ದಾಮೋದರ ನೇರಳ ಸ್ವಾಗತಿಸಿದರು. ಜೇಸಿ ವಿಜೇಶ್ ಹಿರಿಯಡ್ಕ ವಿಶೇಷ ಆಹ್ವಾನಿತರನ್ನು ಪರಿಚಯಿಸಿದರು. ಜೇಸಿ ಗಗನ್ ತೆಂಕಪ್ಪಾಡಿ ಜೇಸಿ ವಾಣಿಯೊಂದಿಗೆ ಕಾರ್ಯಕ್ರಮ ಆರಂಭಗೊಂಡು, ಕಾರ್ಯದರ್ಶಿ ಉದಯಕುಮಾರ್ ರೈ ಬಾಳಿಲ ನಿರೂಪಣೆ ನಡೆಸಿ ವಂದಿಸಿದರು.
ಶಿಬಿರಾರ್ಥಿಗಳು, ಪೋಷಕರು, ಜೇಸಿಐ ಪಂಜ ಪಂಚಶ್ರೀ ಹಾಗೂ ಸ್ಕೌಟ್ ಗೈಡ್ ಸಂಸ್ಥೆಯ ಪದಾಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದರು.